ಹರಿದ್ವಾರ
From Wikipedia, the free encyclopedia
ಹರಿದ್ವಾರ ( ಹಿಂದಿ ಭಾಷೆಯಲ್ಲಿ हरिद्वार ಎಂದು ಸಹ ಬರೆಯಲಾಗುತ್ತದೆ) ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಜಿಲ್ಲಾ ಕೇಂದ್ರ ಮತ್ತು ಹಿಂದೂ ಧರ್ಮೀಯರಿಗೆ ಪರಮ ಪಾವನ ಕ್ಷೇತ್ರಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಹರಿದ್ವಾರ ದೇವರೆಡೆಗೆ ಬಾಗಿಲು ಎನಿಸಿಕೊಳ್ಳುತ್ತದೆ. ಹಿಂದೂಗಳು ಅತಿ ಪವಿತ್ರ ಎಂದು ಭಾವಿಸುವ ೭ ಕ್ಷೇತ್ರಗಳಲ್ಲಿ ಹರಿದ್ವಾರ ಸಹ ಒಂದು. ಹಿಮಾಲಯದ ಗೋಮುಖದಲ್ಲಿ ಉಗಮಿಸಿ ಪರ್ವತಗಳ ನಡುವೆ ೨೫೩ ಕಿ.ಮೀ. ಹರಿದು ಸಾಗಿಬರುವ ಗಂಗಾ ನದಿ ಹರಿದ್ವಾರದಲ್ಲಿ ಪೂರ್ಣವಾದ ಬಯಲು ಪ್ರದೇಶವನ್ನು ಸೇರುತ್ತದೆ. ಈ ಕಾರಣದಿಂದ ಹರಿದ್ವಾರಕ್ಕೆ ಗಂಗಾದ್ವಾರ ಎಂಬ ಹೆಸರು ಸಹ ಇದೆ.
ಹರಿದ್ವಾರ
ಹರಿದ್ವಾರ हरिद्वार | |
---|---|
city | |
Website | haridwar.nic.in |
ಹಿಂದೂ ಪುರಾಣಗಳಲ್ಲಿ ಹರಿದ್ವಾರದ ಉಲ್ಲೇಖ ಬಹಳವಾಗಿದೆ. ಸಮುದ್ರಮಥನದ ವೇಳೆ ಉದ್ಭವಿಸಿದ ಅಮೃತವನ್ನು ಗರುಡನು ಒಯ್ಯುತ್ತಿದ್ದಾಗ ಕಲಶದಿಂದ ಅಮೃತದ ಹನಿಗಳು ಉದುರಿದ ೪ ಸ್ಥಾನಗಳಲ್ಲಿ ಹರಿದ್ವಾರ ಸಹ ಒಂದು. ನಾಸಿಕ, ಉಜ್ಜಯಿನಿ ಮತ್ತು ಪ್ರಯಾಗ ಉಳಿದ ಮೂರು ಸ್ಥಳಗಳು. ಆದ್ದರಿಂದ ಈ ನಾಲ್ಕು ಸ್ಥಳಗಳಲ್ಲಿ ಕುಂಭ ಮೇಳ ಎಂಬ ಉತ್ಸವ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಮೂರು ಮೂರು ವರ್ಷಗಳ ಅಂತರದಲ್ಲಿ ಮೊದಲ ಮೂರು ಸ್ಥಳಗಳಲ್ಲಿ ನಡೆಯುವ ಕುಂಭಮೇಳದ ಅಂತಿಮ ಚರಣ ಪ್ರಯಾಗದಲ್ಲಿ ಮಹಾ ಕುಂಭ ಮೇಳವಾಗಿ ಆಚರಿಸಲ್ಪಡುತ್ತದೆ. ಹರಿದ್ವಾರದ ಹರ್-ಕಿ-ಪೌಡಿ ಎಂಬ ಸ್ಥಾನದಲ್ಲಿ ಅಮೃತದ ಬಿಂದುವು ಬಿದ್ದ ಸ್ಥಳವಿದ್ದು ಇದನ್ನು ಬ್ರಹ್ಮ ಕುಂಡವೆಂದು ಕರೆಯಲಾಗುತ್ತದೆ. ಇಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಸಕಲ ಪಾಪಗಳನ್ನು ತೊಳೆದುಕೊಂಡು ಮೋಕ್ಷ ಸಾಧಿಸುವ ಅತಿ ಪವಿತ್ರಕಾಯಕವೆಂದು ಹಿಂದೂ ಶ್ರದ್ಧಾಳುಗಳು ನಂಬುವರು.