ಮುತ್ತುಸ್ವಾಮಿ ದೀಕ್ಷಿತ
From Wikipedia, the free encyclopedia
ಮುತ್ತುಸ್ವಾಮಿ ದೀಕ್ಷಿತರು (ಮಾರ್ಚ್ ೨೪, ೧೭೭೫) ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಇನ್ನಿಬ್ಬರು ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿಗಳು. ಬಹುತೇಕ ವಾಗ್ಗೇಯಕಾರರು ತೆಲುಗಿನಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದ್ದರೆ ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿರುವುದು ಮಹತ್ವದ ವಿಚಾರವಾಗಿದೆ. ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ದೀಕ್ಷಿತರ ಕೃತಿಗಳಲ್ಲಿ ಕಂಡುಬರುವುದು ಮತ್ತೊಂದು ಪ್ರಧಾನ ಅಂಶ. ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದವರು ಮುತ್ತುಸ್ವಾಮಿ ದೀಕ್ಷಿತರು. ಇವರ ಸಂಗೀತ ಶೈಲಿಯನ್ನು ನಾರಿಕೇಳಪಾಕಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ, ಹೇಗೆ ಹೊರಗೆ ಕಠಿಣವಾದ ಕರಟವಿದ್ದು ಒಳಗೆ ಸವಿಯಾದ ಎಳನೀರೂ, ರುಚಿಯಾದ ಕಾಯಿಯೂ ಇರುತ್ತದೋ ಅದೇ ರೀತಿ, ಮೇಲ್ನೋಟಕ್ಕೆ ಇವರ ಕೃತಿಗಳು ಕಠಿಣವಾಗಿ ತೋರಿದರೂ,ಅವುಗಳಲ್ಲಿನ ಸಂಗೀತ ಸಾಹಿತ್ಯದ ಅಂಶಗಳಿಂದಾಗಿ, ಅವರ ಅತಿ ಉತ್ತಮ ದರ್ಜೆಯ ವಾಗ್ಗೇಯಕಾರತ್ವಕ್ಕೆ ನಿದರ್ಶನವಾಗಿವೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |