ಪುಷ್ಯಭೂತಿ ರಾಜವಂಶ
From Wikipedia, the free encyclopedia
ಪುಷ್ಯಭೂತಿ ರಾಜವಂಶ (ವರ್ಧನ ರಾಜವಂಶ) ಉತ್ತರ ಭಾರತದ ಭಾಗಗಳನ್ನು ೬ನೇ ಮತ್ತು ೭ನೇ ಶತಮಾನದ ಅವಧಿಯಲ್ಲಿ ಆಳಿತು. ಈ ರಾಜವಂಶವು ತನ್ನ ಉತ್ತುಂಗವನ್ನು ಅದರ ಕೊನೆಯ ಅರಸ ಹರ್ಷವರ್ಧನನ ಅಧೀನದಲ್ಲಿ ತಲುಪಿತು. ಹರ್ಷನ ಅಧಿಕಾರದ ಪರಾಕಾಷ್ಠೆಯಲ್ಲಿ, ಅವನ ಸಾಮ್ರಾಜ್ಯವು ಉತ್ತರ ಹಾಗೂ ವಾಯವ್ಯ ಭಾರತದ ಹೆಚ್ಚಿನ ಭಾಗವನ್ನು ಆವರಿಸಿತ್ತು, ಪೂರ್ವದಲ್ಲಿ ಕಾಮರೂಪದ ವರೆಗೆ, ದಕ್ಷಿಣದಲ್ಲಿ ನರ್ಮದಾ ನದಿವರೆಗೆ ವಿಸ್ತರಿಸಿತ್ತು; ಮತ್ತು ಅಂತಿಮವಾಗಿ ಕನ್ನೌಜ್ ಅನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು, ಮತ್ತು ಕ್ರಿ.ಶ. ೬೪೭ರ ವರೆಗೆ ಆಳಿದನು.[1]
ಈ ರಾಜವಂಶದ ಮೂಲಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ. ೭ನೇ ಶತಮಾನದ ಕವಿ ಬಾಣಭಟ್ಟನ ಹರ್ಷಚರಿತ ಅವರ ಮೂಲದ ಕಾಲ್ಪನಿಕ ವಿವರಣೆ ನೀಡುತ್ತದೆ, ಮತ್ತು ಪುಷ್ಯಭೂತಿಯನ್ನು ಈ ರಾಜವಂಶದ ಸ್ಥಾಪಕನೆಂದು ಹೆಸರಿಸುತ್ತದೆ.[2] ಬಾಣನ ವಿವರಣೆಯಲ್ಲಿ ಉಲ್ಲೇಖಿಸಲಾದ ಪುಷ್ಯಭೂತಿಯು ಕಾಲ್ಪನಿಕ ಪಾತ್ರವೆಂದು ತೋರುತ್ತದೆ, ಏಕೆಂದರೆ ಅವನನ್ನು ಈ ರಾಜವಂಶದ ಶಾಸನಗಳು ಅಥವಾ ಯಾವುದೇ ಇತರ ಮೂಲದಲ್ಲಿ ಉಲ್ಲೇಖಿಸಲಾಗಿಲ್ಲ.
ಪುಷ್ಯಭೂತಿ ರಾಜವಂಶವು ಪ್ರಾರಂಭದಲ್ಲಿ ತನ್ನ ರಾಜಧಾನಿ ಸ್ಥಾನೇಶ್ವರದ (ಥಾನೇಶ್ವರ್) ಸುತ್ತಲಿನ ಸಣ್ಣ ಪ್ರದೇಶವನ್ನು ಆಳುತ್ತಿತ್ತು. ಒಬ್ಬ ಇತಿಹಾಸಕಾರನ ಪ್ರಕಾರ, ಅವರ ರಾಜ ಆದಿತ್ಯವರ್ಧನನು ಬಹುಶಃ ಕನ್ನೌಜ್ನ ಮೌಖರಿ ರಾಜ ಶರ್ವವರ್ಮನ್ನ ಸಾಮಂತನಾಗಿದ್ದನು. ಇವನ ಉತ್ತರಾಧಿಕಾರಿ ಪ್ರಭಾಕರವರ್ಧನನು ಕೂಡ ತನ್ನ ಆರಂಭಿಕ ದಿನಗಳಲ್ಲಿ ಮೌಖರಿ ರಾಜ ಅವಂತಿವರ್ಮನ್ನ ಸಾಮಂತನಾಗಿರಬಹುದು. ಪ್ರಭಾಕರನ ಮಗಳು ರಾಜ್ಯಶ್ರೀ ಅವಂತಿವರ್ಮನ್ನ ಮಗ ಗ್ರಹವರ್ಮನ್ ಅನ್ನು ವಿವಾಹವಾದಳು. ಈ ವಿವಾಹದ ಪರಿಣಾಮವಾಗಿ, ಪ್ರಭಾಕರನ ರಾಜಕೀಯ ಸ್ಥಾನಮಾನ ಗಣನೀಯವಾಗಿ ಹೆಚ್ಚಿತು, ಮತ್ತು ಅವನು ಸಾಮ್ರಾಜ್ಯಶಾಹಿ ಬಿರುದಾದ ಪರಮ ಭಟ್ಟಾರಕ ಮಹಾರಾಜಾಧಿರಾಜ ಎಂಬುದನ್ನು ಸ್ವೀಕರಿಸಿದನು.
ಹರ್ಷಚರಿತದ ಪ್ರಕಾರ, ಪ್ರಭಾಕರನ ಮರಣದ ನಂತರ, ಮಾಲ್ವಾದ ರಾಜನು ಗೌಡ ದೊರೆಯ ಬೆಂಬಲದಿಂದ ಕನ್ನೌಜ್ ಮೇಲೆ ದಾಳಿ ಮಾಡಿದನು. ಮಾಲ್ವಾ ರಾಜನು ಗ್ರಹವರ್ಮನ್ ಅನ್ನು ಕೊಂದು ರಾಜ್ಯಶ್ರೀಯನ್ನು ವಶಪಡಿಸಿಕೊಂಡನು. ಬಾಣನು ಈ ರಾಜನನ್ನು ಹೆಸರಿಸುವುದಿಲ್ಲ, ಆದರೆ ಇತಿಹಾಸಕಾರರು ಈ ರಾಜನು ಉತ್ತರ ಗುಪ್ತ ರಾಜವಂಶದ ಆಡಳಿತಗಾರನೆಂದು ಊಹಿಸುತ್ತಾರೆ. ಪ್ರಭಾಕರನ ಹಿರಿಯ ಮಗ ರಾಜ್ಯವರ್ಧನನು ಮಾಲ್ವಾ ಅರಸನನ್ನು ಪರಾಜಿತಗೊಳಿಸಿದನು, ಆದರೆ, ಗೌಡ ರಾಜನ ಕೈಯಲ್ಲಿ ಮೋಸದಿಂದ ಸಾವನ್ನಪ್ಪಿದನು.